map loading...

Friday, October 28, 2016

Happy Deepavali to All. ( Courtesy : poojavidhana.blogspot.com)

ದೀಪಾವಳಿ ಹಬ್ಬವನ್ನು ಆಶ್ವಯುಜ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುತ್ತೀವಿ. ದೀಪಾವಳಿ ಅಂದರೆ ೩-೪ ದಿನದ ಹಬ್ಬ.
  • ತ್ರಯೋದಶಿ ದಿನ - ನೀರು ತುಂಬುವ ಹಬ್ಬ
  • ಚತುರ್ದಶಿ ದಿನ - ನರಕ ಚತುರ್ದಶಿ
  • ಅಮಾವಾಸ್ಯೆ ದಿನ - ಧನ ಲಕ್ಷ್ಮೀ ಪೂಜೆ
  • ಪಾಡ್ಯ ದಿನ - ಬಲಿ ಪಾಡ್ಯಮಿ /ಬಲೀಂದ್ರನ ಪೂಜೆ
ನೀರು ತುಂಬುವ ಹಬ್ಬ - ಹೆಸರೇ ಹೇಳುವಂತೆ ನೀರನ್ನು ಸಂಗ್ರಹಿಸುವ ದಿನ. ಈ ದಿನ ಸ್ನಾನದ ಮನೆ, ಬಚ್ಚಲನ್ನು ಸ್ವಚ್ಛಮಾಡಿ, ಮಾರನೆಯ ದಿನದ ಅಭ್ಯಂಜನಕ್ಕೆ ನೀರು ಹಿಡಿದು ಇಡುತ್ತಾರೆ. ಕೊಳೆಯನ್ನು ಹೋಗಿಸಿ ಮನೆಯನ್ನು ಶುಭ್ರಮಾಡುವಂತೆ , ನಮ್ಮ ಮನಸಿನಲ್ಲಿರುವ ಕೆಟ್ಟ ವಿಷಯಗಳನ್ನು ತೊಲಗಿಸಿ ನಿರ್ಮಲವಾಗಿ ಇಟ್ಟುಕೊಳ್ಳಿ ಎಂಬ ಸಂಕೇತ ಇರಬಹುದು. ಹಿಂದಿನ ಕಾಲದಲ್ಲಿ ತುಂಬಿದ ಸಂಸಾರ, ಮನೆಯಲ್ಲಿ ಬಹಳ ಜನ ಇರುತ್ತಿದ್ದರು. ಎಲ್ಲರೂ ಒಂದೇ ದಿನ ಅಭ್ಯಂಜನ ಮಾಡಬೇಕಾದರೆ ಸಾಕಷ್ಟು ನೀರು ಮೊದಲೇ ಶೇಖರಿಸಿ ಇಡಬೇಕಿತ್ತು.ಹೀಗಾಗಿ ಈ ದಿನ ನೀರುಹಿಡಿಯುವುದರಲ್ಲೇ ಕಳೆದು ಹೋಗುತ್ತಿತ್ತು ಅನ್ನಿಸುತ್ತದೆ.ಅದಕ್ಕೆ ಈ ದಿನವನ್ನು ನೀರು ತುಂಬುವ ಹಬ್ಬವೆಂದು ಆಚರಿಸುವ ವಾಡಿಕೆ ಬಂತೇನೋ.ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೆ :)

ನರಕ ಚತುರ್ದಶಿ ದಿನ ಬೆಳಿಗ್ಗೆ ಮನೆಯವರೆಲ್ಲ ಎಣ್ಣೆ ಶಾಸ್ತ್ರ ಮಾಡಿ ಅಭ್ಯಂಜನ ಸ್ನಾನ ಮಾಡುವ ಪದ್ಧತಿ. ಶ್ರೀ ಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ನೆನಪಿನ ದಿನ. ಈ ವಿಜಯವನ್ನು ಆಚರಿಸುತ್ತೀವಿ. ಈ ದಿನ ವಿಶೇಷವಾದ ಪೂಜೆ ಅಂತೇನು ಇಲ್ಲ. ಪ್ರತಿದಿನದಂತೆ ದೇವರ ಪೂಜೆ ಅಷ್ಟೆ.

Amavasya Lakshmi Pooje:

ಮಾರನೆಯ ದಿನ ಅಮಾವಾಸ್ಯೆ.ಧನಲಕ್ಷ್ಮೀ ಪೂಜೆ ಅಮಾವಾಸ್ಯೆ ದಿ ಮಾಡುತಾರೆ ಪೂಜೆಯನ್ನು ಸಾಯಂಕಾಲ ಮಾಡಬೇಕುದೇವರ ಮನೆ ಅಥವಾ ಪೂಜೆ ಮಾಡುವ ಸ್ಥಳವನ್ನು ರಂಗೋಲಿ ಹಾಕಿ ಅಲಂಕರಿಸಿ. ಲಕ್ಷ್ಮಿ ದೇವಿ ಫೋಟೋ , ಬೆಳ್ಳಿ ವಿಗ್ರಹ /ಪ್ರತಿಮೆ ಇಟ್ಟುಕೊಳ್ಳಿ. ದರಜೊತೆಗೆ ನಿಮ್ಮ ಮನೆಯಲ್ಲಿರುವ ದುಡ್ಡು/ಕಾಸು/ನಾಣ್ಯಗಳು ಮತ್ತು ವಡವೆ/ಆಭರಣಗಳನ್ನೂ ದೇವರ ಜೊತೆ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿ ಪೂಜೆ, ನಂತರ ಮಹಾಲಕ್ಷ್ಮಿ ಪೂಜೆ. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಲಕ್ಷ್ಮೀ ಅಷ್ಟೂತ್ತರ ಇಲ್ಲಿದೆ.ಯಾವುದಾದರು ಸಿಹಿ ತಿಂಡಿ ಮಾಡಿ, ದೇವಿಗೆ ನೈವೇದ್ಯ ಮಾಡಿ. ಪೂಜೆಯ ನಂತರ ಇದನ್ನು ಪ್ರಸಾದವಾಗಿ ಸ್ವೀಕರಿಸಿ. ಸಕಲ ಐಶ್ವರ್ಯ ಸಂಪತ್ತನ್ನು ಕರುಣಿಸಿ ಎಂದು ಭಕ್ತಿಯಿಂದ ಲಕ್ಷ್ಮಿಯನ್ನು ಪ್ರಾರ್ಥಿಸಿ.ನಮ್ಮ ಮನೆಯಲ್ಲಿ ಮಾಡಿದ ಪೂಜೆಯ ಚಿತ್ರ ಕೆಳಗಿದೆ.
ಅಮಾವಾಸ್ಯೆ ಮಾರನೆಯ ದಿನ ಕಾರ್ತಿಕ ಮಾಸದ ಪಾಡ್ಯ/ಪ್ರತಿಪತ್ . ಈ ದಿನ ಬಲಿ ಪಾಡ್ಯಮಿ ಹಬ್ಬ. ಬಲಿ ಚಕ್ರವರ್ತಿಯು ಭೂಲೋಕ ಆಳುತ್ತಿದ್ದ ರಾಜ. ವಿಜಯಶಾಲಿಯಾದ ರಾಜನು ದೇವಲೋಕವನ್ನೂ ಗೆದ್ದುಕೊಂಡು ತನ್ನದಾಗಿಸಿಕೊಂಡನು. ಇದರಿಂದ ಇಂದ್ರಾದಿ ದೇವತೆಗಳು ದೇವಲೋಕವನ್ನು ಬಿಡುವಂತಾಯಿತು. ಅವರು ವಿಷ್ಣುವಿನಲ್ಲಿ ಮೊರೆ ಹೋದರು. ಆಗ ಶ್ರೀ ವಿಷ್ಣು ವಾಮನ ಅವತಾರ ತಾಳಿ ಬಲಿಯ ಬಳಿ ಬಂದು, ತನಗೆ ೩ ಹೆಜ್ಜೆ ಇಡುವಷ್ಟು ಜಾಗ ಕೊಡು ಎಂದು ಕೇಳಿದನು. ಒಂದು ಹೆಜ್ಜೆಯಿಂದ ಭೂಲೋಕವೆಲ್ಲ ಮುಚ್ಚಿತು, ಇನ್ನೊಂದು ಹೆಜ್ಜೆಯಿಂದ ಆಕಾಶವೆಲ್ಲ ಮುಚ್ಚಿ ಹೋಯಿತು. ಮೂರನೆಯ ಹೆಜ್ಜೆ ಎಲ್ಲಿ ಇಡಲಿ ಎಂದು ವಾಮನ ಕೇಳಲು, ಬಲಿಯು ನನ್ನ ತಲೆ ಮೇಲೆ ಇಡು ಎಂದನು. ಹೀಗ ವಿಷ್ಣುವು ಬಲಿಯ ತಲೆಯನ್ನು ಮೆಟ್ಟಿ ಅವನನ್ನು ಪಾತಾಳಕ್ಕೆ ತುಳಿದನು. ಬಲಿಯ ಧರ್ಮ ನಿಷ್ಠೆಯನ್ನು ಮೆಚ್ಚಿ ವಿಷ್ಣುವು ಅವನಿಗೆ ಪಾತಾಳದ ಅಧಿಪತ್ಯ ಕೊಟ್ಟನು. ಜೊತೆಗೆ ವರುಷಕ್ಕೆ ಒಂದು ದಿನ ಭೂಲೋಕಕ್ಕೆ ಮರಳಿ ಬಂದು, ಭೂಲೋಕವನ್ನು ಆಳುವಂತೆ ಅನುಗ್ರಹಿಸಿದನು. ಇದೆ ಬಲಿಪಾಡ್ಯಮಿ. ಈ ದಿನ ಗೊಪೂಜೆಯೂ ನಡೆಯುತ್ತದೆ. ಮನೆಯಲ್ಲಿ ಬೆಳ್ಳಿ ಕೃಷ್ಣ, ಬೆಳ್ಳಿ ಹಸು ಪ್ರತಿಮೆಗಳಿಗೆ ಪೂಜೆ ಮಾಡುತ್ತಾರೆ. ಕೆಲವರ ಮನೆಯಲ್ಲಿ ಕೆರಕ ಇಟ್ಟು ಪೂಜೆ ಮಾಡುತ್ತಾರೆ. ಕೆರಕ ಎಂದರೆ ಹಸುವಿನ ಸಗಣಿಯ ಉಂಡೆಗೆ ಚೆಂಡುಹೂವು ಇಡುತ್ತಾರೆ. ಇದು ಗಣಪತಿಯ ಸ್ವರೂಪ ಎಂದು ಭಾವಿಸುತ್ತಾರೆ. ಬಲಿ ಚಕ್ರವರ್ತಿಯ ರಾಜ್ಯವು ಐಶ್ವರ್ಯ, ಅಭಿವೃದ್ಧಿ ಹೊಂದಿತ್ತು. ಅಂತಯೇ ನಮ್ಮ ಬಾಳಲ್ಲೂ ಲಕ್ಷ್ಮೀ ಸ್ಥಿರವಾಗಿ ನೆಲಿಸಿ, ಅಭಿವೃದ್ಧಿ ಸಿಗಲಿ ಎಂದು ಪ್ರಾರ್ಥನೆ ಮಾಡುವ ಪದ್ಧತಿ.

ದೀಪಾವಳಿ ಹಬ್ಬದಲ್ಲಿ ನೇಮ, ಉಪವಾಸ, ವ್ರತ ಕಥೆ ಇವ್ಯಾವುದೂ ಇಲ್ಲ. ಹಾಗಾಗಿ ಇದು ಸಂತಸ, ಸಡಗರ, ಸಂಭ್ರಮದ ಹಬ್ಬ :) ಬೆಳಿಗ್ಗೆ ಎದ್ದು ಅಭ್ಯಂಜನ ಸ್ನಾನ ಮಾಡಿ, ದೇವರ ಪೂಜೆ ಮಾಡಿ,ಹೊಸ ಉಡುಗೆ ಹಾಕಿಕೊಂಡು, ರುಚಿಯಾದ ಹಬ್ಬದ ಅಡಿಗೆ ಊಟ ಮಾಡಿ, ವಿಧ ವಿಧವಾದಪಟಾಕಿ ಹೊಡೆದು ಆನಂದಿಸುವ ಹಬ್ಬ ಇದು.
ದೀಪಾವಳಿಯ ಬೆಳಕು ಎಲ್ಲರ ಬಾಳನ್ನೂ ಪ್ರಕಾಶಗೊಳಿಸಲಿ ಎಂದು ಆಶಿಸುತ್ತೇನೆ :)


No comments:

Post a Comment